ನರಾಕಾಸುರ, ಓಹ್ ಹೆಸರಲ್ಲೇ “ಅಸುರ” ಅಂತ ಬರುತ್ತೆ. ಅಂದರೆ ನರಕಾಸುರ ಒಬ್ಬ ರಾಕ್ಷಸನಾಗಿದ್ದಿರ ಬಹುದೆ?ಬಹುಶಃ ಇರಲಿಕ್ಲಿಲ್ಲ, ನಮ್ಮ ಪುರಾಣಗಳಲ್ಲಿ ತಿಳಿಸುವದೇನೆಂದರೆ ನರಕಾಸುರ, “ವರಾಹ” ಅವತಾರದಲ್ಲಿದ್ದಾಗ ವಿಷ್ಣು ಹಾಗೂ ಭೂದೇವಿಗೆ ಜನಿಸಿದವನು. ದೇವರ ಪುತ್ರನೆಂದ ಮೇಲೆ ಕೇಳಬೇಕೇ? ಹುಟ್ಟಿನಿಂದಲೇ ಈತ ಮಹಾ ವೀರ, ಪರಾಕ್ರಮಿಯಾಗಿದ್ದ. ತನ್ನ ಪರಾಕ್ರಮದ ಬಗ್ಗೆ ಆತನಿಗೂ ತಿಳಿದಿತ್ತು, ಅದರ ಬಗ್ಗೆ ಅಹಂಕಾರವೂ ಇತ್ತು ಎಂದೇ ಇಟ್ಟುಕೊಳ್ಳಿ.
ಇಂತಿಪ್ಪ ಅಹಂಕಾರಿ ನರಕಾಸುರನಿಗೆ, ಒಂದಿನ ಅವನ ಆಸ್ತಾನದ ಒಬ್ಬ ಋಷಿಗಳು ಏನಂತ ಹೇಳ್ತಾರೆ ಅಂದ್ರೆ ನೀನು ಒಂದು ವಿಶೇಷ ಯಜ್ಞಮಾಡೋದ್ರಿಂದ ನೀನು ಈ ಜಗತ್ತಿಗೇ ಅಧಿಪತಿ ಆಗುವ ಸಯೋಗವಿದೆ. ಅಂತಃ ಯಜ್ಞವನ್ನು ನೀನು ನೆರವೇರಿಸಲು ಸಾವಿರಾರು ಹೆಣ್ಣು ಮಕ್ಕಳನ್ನು ಬಲಿ ಕೊಡಬೇಕಾಗುತ್ತದೆ. ನೀನು ಈಗಿನಿಂದಲೇ ಸುತ್ತಮುತ್ತಲಿನ ರಾಜ್ಯಗಳ ಮೇಲೆ ದಾಳಿಯನ್ನು ನಡೆಸು, ಹಾಗೂ ಎಷ್ಟು ಸಾದ್ಯವೋ ಅಷ್ಟು ಹೆಣ್ಣುಮಕ್ಕಳನ್ನು ತಂದು ನಿನ್ನ ಸೆರೆಮನೆಯಲ್ಲಿಡು. ಎಂದು ಕಿವಿ ಚುಚ್ಚುತ್ತಾರೆ. ಇದಕ್ಕೆ ಒಪ್ಪಿದ ನರಕಾಸುರ, ಅದರಂತೆಯೇ ನಡೆದುಕೊಳ್ಳುತ್ತಾನೆ.
ಈತನ ಇಂತಹ ದುಷ್ಕೃತ್ಯದ ಮಾಹಿತಿ ಸುತ್ತಮುತ್ತ ಎಲ್ಲಾ ರಾಜ್ಯಗಳಿಗೂ ಹರಡುತ್ತದೆ. ಜನಸಾಮಾನ್ಯರು ಆತಂಕಕ್ಕೆ ಒಳಗಾಗುತ್ತಾರೆ. ಏನು ಮಾಡುವುದು? ಯಾರ ಸಹಾಯ ಬೇಡುವುದು? ಒಬ್ಬೇ ಒಬ್ಬನ ಅಧಿಕಾರದ ದುರಾಸೆಗಾಗಿ ಎಷ್ಟೆಲ್ಲಾ ಸಾವು-ನೋವುಗಳು ಸಂಭವಿಸುವುದಲ್ಲಾ? ಇದನ್ನು ಹೇಗಾದರೂ ತಡೆಯಬೇಕು. ಆದರೆ ಯಾರಿಗೆ ಹೋಗಿ ಹೇಳಲಿ. ನರಕಾಸುರನನ್ನು ಪಳಗಿಸುವಷ್ಟು ಶೌರ್ಯ ಯಾರಿಗೆ ತಾನೆ ಇದೇ?
ಈ ಹೊತ್ತಿಗಾಗಲೇ ಕೃಷ್ಣ ತನ್ನ ಸೋದರಮಾವನಾದ “ಕಂಸ”ನನ್ನು ಕೊಂದು ಬಿಟ್ಟು ಸುತ್ತಮುತ್ತೆಲ್ಲಾ ಜನಪ್ರಿಯನಾಗಿದ್ದನಲ್ಲ? ಓ, ಅವನೇ ಸರಿ ಅವನಿಗೇ ಹೋಗಿ ಕೇಳಿಕೊಳ್ಳೋಣ ಎಂದು ತೀರ್ಮಾನಿಸ್ತಾರೆ. ಆದ್ರೆ ಏನ್ಮಾಡೋದು, ಈ ಕೃಷ್ಣ ಊರಲ್ಲಿ ಇರೋದೇ ಕಡಿಮೆ, ಆ ಊರೂ, ಈ ಊರೂ ಅಂತ ಊರೂರು ಸುತ್ತುತ್ತಿರುತ್ತಾನೆ. ಸರಿ, ಅವನ ಹೆಂಡತಿ “ಸತ್ಯಭಾಮ” ಅವರಿಗೆ ತಿಳಿಸಿದರೆ ನಮಗೆ ಸ್ವಲ್ಪ ಸಹಾಯವಾದರೂ ಸಿಕ್ಕಬಹುದಲ್ಲ? ಎಂದು ಯೋಚಿಸಿ, ಸತ್ಯಭಾಮಾಳ ಬಳಿ ಬಂದು ತಮಗೆ ಬಂದಿರುವ ಆಪತ್ತಿನ ಬಗ್ಗೆ ದೂರು ನೀಡುತ್ತಾರೆ.
ನಂತರ ಕೃಷ್ಣನಿಗೂ ಇದರ ಮಾಹಿತಿ ತಿಳಿಯುತ್ತದೆ. ಕೃಷ್ಣ ಹಾಗೂ ಸತ್ಯಭಾಮಳ ನೇತೃತ್ವದಲ್ಲಿ ನರಕಾಸುರನ ಮೇಲೆ ದಾಳಿ ನಡೆಸುತ್ತಾರೆ. ವಿಚಿತ್ರ ನೋಡಿ, ನರಕಾಸುರ ಪರೋಕ್ಷವಾಗಿ ಕೃಷ್ಣನ ಮಗನೂ ಹೌದು. ಆದರೆ ಅಧರ್ಮ ತಲೆ ಎತ್ತಿದಲ್ಲೆಲ್ಲಾ ನಾನು ಮತ್ತೆ ಮತ್ತೆ ಜನ್ಮ ತಾಳುತ್ತೇನೆ,(‘ಸಂಭಾವಾಮಿ ಯುಗೇ ಯುಗೇ’) ಎಂದು ಶ್ರೀಕೃಷ್ಣನೇ ಭಗವದ್ಗೀತೆಯ ಆರಂಭದಲ್ಲಿ ಹೇಳಿಬಿಟ್ಟಿದ್ದಾನಲ್ಲಾ? ಅಧರ್ಮಿಗಳು ಯಾರಾದರೂ ಸರಿಯೆ, ಸ್ವಂತ ಮಗನಾದರೂ!
ಸರಿ, ಕೃಷ್ಣ ಮತ್ತು ನರಕಾಸುರನ ನಡುವೆ ಭರ್ಜರಿ ಯುದ್ದ ನಡೆಯುತ್ತೆ, ಯುದ್ದದ ಅಂತ್ಯದಲ್ಲಿ ಕೃಷ್ಣನೇ ಗೆಲ್ಲಬೇಕಲ್ಲ? ಹೌದು, ಕೃಷ್ಣನೇ ಗೆಲ್ಲುತ್ತಾನೆ. ಆದರೂ ಯಾವತ್ತೂ ಅಧಿಕಾರದ ಅಥವಾ ರಾಜ್ಯದ ಆಸೆಯೆ ಇರದ ಕೃಷ್ಣ, ನರಕಾಸುರನ ಮಗನಿಗೇ (ನರಕಾಸುರನ ಮಗನ ಹೆಸರು ಭಗದತ್ತ. ಮುಂದೆ ಕುರುಕ್ಷೇತ್ರ ಯುದ್ದದಲ್ಲಿ ಈತನು ಕೌರವರ ಕಡೆಗೆ ಯುದ್ದ ಮಾಡುತ್ತಾನೆ) ಮತ್ತೆ ಪಟ್ಟಕಟ್ಟಿ ಅಲ್ಲಿಂದ ಹೊರಡುತ್ತಾನೆ.
ಆದರೆ ನರಕಾಸುರನಿಗೂ ಒಂದು ಕಟ್ಟ ಕಡೇ ಆಸೆ ಅಂತ ಇರಲೇ ಬೇಕಲ್ಲ, ಆತನೂ ಏನು ಸಾಮನ್ಯನಲ್ಲವಲ್ಲ. ಸರೀ ಆತನ ನೆನೆಪಿಗಾಗಿ ನಾವು ಈಗಲೂ ನರಕ ಚತುರ್ದಶಿ ಎಂದು ಅಥವಾ ನಮ್ಮ ನೆಚ್ಚಿನ ದೀಪಾವಳಿ ಎಂದು ಆಚರಿಸುತ್ತೇವೆ. ನರಕಾಸುರನನ್ನು ಅಷ್ಟರ ಮಟ್ಟಿಗಾದರೂ ನಾವು ಇನ್ನೂ ನೆನಪಿನಲ್ಲಿಟ್ಟುಕೊಂಡಿದ್ದೇವೆ.
ಸರಿ ಅಷ್ಟೊತ್ತಿಗಾಗಲೇ ಸಾಕಷ್ಟು ಹೆಣ್ಮಕ್ಳನ್ನ ತಂದು ಸೆರೆ ಇಟ್ಟಿದ್ದಲ್ಲಾ ನರಕಾಸುರ? ಅವರ ಗರಿ ಏನಾಯ್ತು? ಏನೂ ಆಗಲಿಲ್ಲ. ಕೃಷ್ಣನೇ ಅವರಿಗೆಲ್ಲಾ ಆಶ್ರಯ ಕೊಟ್ಟ. ನಾಮಕಾವಸ್ತೆಯ ಗಂಡನಾಗಿ. ಹೌದು, ಸಮಾಜದಲ್ಲಿ ತಮ್ಮ ಸ್ಥಾನ, ಮಾನ, ಗೌರವಗಳಿಗೆ ದಕ್ಕೆ ಆಗದಿರಲಿ ಎಂದು ಆ ಹೆಣ್ಣುಮಕ್ಕಳ ಬೇಡಿಕೆಯ ಒತ್ತಾಸೆಗೆ ಬೆಲೆಕೊಟ್ಟು, ಅವರಿಗೆ ತನ್ನನ್ನು ತಮ್ಮ ಪತಿ ಎಂದು ಹೇಳಿಕೊಳ್ಳಲು ಆ ಮೂಲಕ ಜಲೀಲನಂತಹ “ಯಾಕೇ ಬುಲ್ ಬುಲ್ ಮಾತಾಡಕಿಲ್ವ” ಎಂದು ಚೇಡಿಸಲು ಬರುವ ಅನ್ಯಗಂಡಸರಿಂದ ಒಂದು ರಕ್ಷಣೆಯನ್ನು ನೀಡುತ್ತಾನೆ.
ಅದಕ್ಕೇ ನಾವು ಈಗಲೂ ಹೇಳೋದು, ಕೃಷ್ಣನಿಗೆ 16 ಸಾವಿರ ಹೆಂಡತಿಯರು ಅಂತ. ಆದರೆ ಅದರ ಹಿಂದಿನ ಸತ್ಯ ಈಗ ನಿಮಗೆ ತಿಳಿಯಿತಲ್ಲ? ಹೆಣ್ಣಿನ ಮೇಲಿನ ಮೋಹದಿಂದ ಅಥವಾ ಮಾವನ ಆಸ್ತಿಯ ಮೇಲಿನ ಆಸೆಯಿಂದ ಕೃಷ್ಣ 16000 ಮದುವೆ ಮಾಡಿಕೊಳ್ಳಲಿಲ್ಲ.
ಕೊ.ಕೊ:
ನೋಡಿ ಕೃಷ್ಣ ಇದೇ ರೀತಿ ಇನ್ನೂ ಹತ್ತು ಹಲವು ರಾಜ್ಯಗಳನ್ನು ವಶಪಡಿಸಿಕೊಂಡಿರುತ್ತಾನೆ. ಎಲ್ಲೆಲ್ಲಿ ಅಧರ್ಮ, ಭ್ರಷ್ಟಾಚಾರ ಹೆಚ್ಚಾಗಿರುತ್ತದೋ ಅಂತಃ ರಾಜರ ಮೇಲೆ ದಾಳಿ ಮಾಡುವುದೇ ಕೃಷ್ಣನ ಕೆಲಸವಾಗಿರುತ್ತದೆ. ಅದು ತನ್ನ ಸ್ವಂತ ಮಾವ(ಕಂಸ)ನೇ ಆಗಿರಬಹುದು, ಪರೋಕ್ಷವಾಗಿಯಾದರೂ ಸ್ವಂತ ಮಗ(ನರಕಾಸುರ)ನೇ ಆಗಿರಬಹುದು ಅಥವಾ ಹಸ್ತಿನಾಪುರದ ಧುರ್ಯೋಧನನೇ ಆಗಿರಬಹುದು. ಯಾರ ಮೇಲಾದರೂ ಸರಿ, ಅಧರ್ಮಿಗಳನ್ನು, ಭ್ರಷ್ಟರನ್ನು ಮಟ್ಟ ಹಾಕುವುದೇ ಅವನ ಕಾರ್ಯವಾಗಿರುತ್ತದೆ. ಆದರೆ ಗಮನಿಸಿ| ಕೃಷ್ಣ ಎಂದಿಗೂ ಆಧಿಕಾರದ ಅಥವಾ ಭೂಮಿಯ ದುರಾಸೆಗೆಂದು ಯುದ್ದ ಮಾಡಲೇ ಇಲ್ಲ. ಯುದ್ದದಲ್ಲಿ ಗೆದ್ದರೂ ಎಂದೂ ಪರರಾಜ್ಯದ ಮೇಲೆ ತನ್ನ ಧರ್ಮ ಅಥವಾ ಅಧಿಕಾರ ಯಾವುದನ್ನೂ ಹೇರುವುದಿಲ್ಲ. ಸೋತ ರಾಜನ ಮಗನನ್ನೋ ಅಥವಾ ಇನ್ನಾರೋ ಸಂಭಂಧಿಯನ್ನೋ ಪುನಃ ಪಟ್ಟಕ್ಕೆ ತಂದು ಮತ್ತೆ ತನಗೂ ಈ ರಾಜ್ಯಕ್ಕೂ ಸಂಭಂದವೇ ಇಲ್ಲವೆಂಬುವಂತೆ ಇರುತ್ತಿರುತ್ತಾನೆ.
ತಾತ್ಪರ್ಯ:
ಮೌರ್ಯ ವಂಶದ ಸ್ಥಾಪಕ “ಚಾಣಕ್ಯ: ಕೂಡ ತನ್ನ “ಚಾಣಕ್ಯನೀತಿ”ಯಲ್ಲಿ ಇದನ್ನೇ ಉಲ್ಲೇಖಿಸಿರುವುದು ಗಮನಾರ್ಹ. ಅನ್ಯರ ಮೇಲೆ ನಮ್ಮ ಅಧಿಕಾರವನ್ನಾಗಲಿ, ಧರ್ಮವನ್ನಾಗಲಿ ಎಂದೂ, ಯಾವತ್ತೂ ಹೇರಬಾರದು. ಅವರು ಯುದ್ದದಲ್ಲಿ ನಮಗೆ ಸೋತವರೇ ಆಗಿರಬಹುದು, ಅಥವಾ ನಮ್ಮ ವೈರಿಗಳೇ ಆಗಿರಬಹುದು ಅಥವಾ ಇನ್ನಾವುದೇ ಸನ್ನಿವೇಶವಿರಬಹುದು.



3 pings